*ಬುದ್ಧ ಕೇವಲ ಧಾರ್ಮಿಕ ವ್ಯಕ್ತಿಯಲ್ಲ, ಆತ ಮಾನವತೆಯ ಮಹಾನ್ ಚಿಂತಕ:*
*ಪ್ರೊ ಟಿ ಎಸ್ ವಂಟಗೂಡಿ*
ರಾಯಬಾಗ:ಎಷ್ಯಾದ ಬೆಳಕು ಎಂದೇ ಪ್ರಸಿದ್ಧನಾದ ಗೌತಮ
ಬುದ್ಧನು ಕೇವಲ ಧಾರ್ಮಿಕ ವ್ಯಕ್ತಿಯಲ್ಲ, ಆತ ಮಾನವತೆಯ ಮಹಾನ್ ಚಿಂತಕ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ವಾಗ್ಮಿ ಪ್ರೊ ಟಿ ಎಸ್ ವಂಟಗೂಡಿ ಹೇಳಿದರು.
ತಾಲೂಕಿನ ಹಿಡಕಲ್ ಗ್ರಾಮದ ಜಡಿ ಸಿದ್ದೇಶ್ವರ ನಿಲಯದ ಆವರಣದಲ್ಲಿ ಇಂದು ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬುದ್ಧದೇವರು
ಅನುಭವದ ಮೂಲಕ ಸತ್ಯವನ್ನು ಅರಸಿದ ತತ್ತ್ವಜ್ಞ ಎಂದರು. ಜೀವನದ ದುಃಖದ ಮೂಲವನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ಬೋಧಿಸಿದ ಬುದ್ಧನು, ಅಹಿಂಸೆ, ಸಮಾನತೆ ಮತ್ತು ಮಧ್ಯಮ ಮಾರ್ಗದ ಸಂದೇಶವನ್ನು ವಿಶ್ವಕ್ಕೆ ನೀಡಿದ ಮಹಾನುಭಾವ ಎಂದು ವಿಶ್ಲೇಷಿಸಿದರು.
ಬುದ್ಧನ ಉಪದೇಶಗಳು ಇಂದಿನ ಅಶಾಂತ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದ್ದು, ಲೋಭ, ದ್ವೇಷ, ಅಹಂಕಾರಗಳಿಂದ ಮುಕ್ತವಾಗಿರುವ ಮನಸ್ಸು ಮಾತ್ರ ಶಾಂತಿಯ ದಾರಿಯನ್ನು ಕಾಣಬಲ್ಲದು ಎಂದು ವಿವರಿಸಿದರು. "ಅತ್ತ ದೀಪೋ ಭವ" ಎಂಬ ಬುದ್ಧನ ವಾಕ್ಯವನ್ನು ಉಲ್ಲೇಖಿಸಿ, ಪ್ರತಿಯೊಬ್ಬರೂ ತಮ್ಮೊಳಗಿನ ಬೆಳಕನ್ನು ಕಂಡುಕೊಳ್ಳಬೇಕು ಎಂಬ ಸಂದೇಶವನ್ನು ಸಾರಿದರು.
ಇಂದಿನ ಕಾಲದಲ್ಲಿ ಮೌಲ್ಯಗಳ ಕುಸಿತ ಕಂಡುಬರುತ್ತಿರುವ ಸಂದರ್ಭದಲ್ಲಿ ಬುದ್ಧನ ತತ್ವಗಳು ವ್ಯಕ್ತಿತ್ವ ವಿಕಾಸಕ್ಕೆ ಮಾರ್ಗದರ್ಶಿಯಾಗುತ್ತವೆ. ಸಹಾನುಭೂತಿ, ಕರುಣೆ, ತಾಳ್ಮೆ ಮತ್ತು ಆತ್ಮಪರಿಶೀಲನೆಗಳ ಮೂಲಕ ಬದುಕನ್ನು ಅರ್ಥಪೂರ್ಣಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿ, ಬುದ್ಧನ ತತ್ತ್ವಗಳ ಪ್ರಸ್ತುತತೆಯನ್ನು ಅರಿತುಕೊಂಡರು.
ಪ್ರಾಚಾರ್ಯರಾದ ಶ್ರೀ ಲಕ್ಷ್ಮಣ ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಬುದ್ಧ ದೇವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು. ಜಡಿಸಿದ್ದ ವಂಟಗೂಡಿ, ಶಿವಪುತ್ರ ಕಾಂಬಳೆ ಅಮಿತ್ ಪೂಜೇರಿ ಹಾಲಸಿದ್ಧ ವಂಟಗೂಡಿ, ರಾಮು ವಂಟಗೂಡಿ ಕರಿಸಿದ್ದ ವಂಟಗೂಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಭಾಗಿರತಿ ಪೂಜಾರಿ ಸ್ವಾಗತಿಸಿ ನಿರೂಪಿಸಿದರು. ಮೀನಾಕ್ಷಿ ವಂಟಗೂಡಿ ವಂದಿಸಿದರು.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments