*ವಸಂತನ ತೇರು*
ಚೈತ್ರ ಮಾಸದ ಚಿಗುರು
ಹಸಿರ ಸಿರಿಯ ಕೊನರು
ಹೊಸತನಕ್ಕೆ ನಾಂದಿ ಹಾಡಿದೆ
ವಸಂತ ಋತುವಿನ ತೇರು .
ಬಿಸಿಲ ಬೇಗೆಯ ನರ್ತನ
ಚಿಗುರಿ ನಗುತಿದೆ ಕಾನನ
ಹೊಂಗೆ , ಮಾವು, ಬೇವು
ಭುವಿಗೆ ಶೃಂಗರಿಸಿ ತೋರಣ.
ಭೂರಮೆ ಒಡಲ ಒಡನಾಟ
ಹೂವು ದುಂಬಿಗಳ ಚೆಲ್ಲಾಟ
ಫಲ ಪುಷ್ಪ ಪರಿಮಳದಿ
ಪ್ರಕೃತಿ ತಳೆದ ಮೈಮಾಟ .
ವರುಷಕ್ಕೊಮ್ಮೆ ಅರಳುವ ಚೇತನ
ಜೀವ ಸಂಕುಲಕ್ಕಿದು ಸಿರಿತನ
ಸಂತೋಷ , ಸಂಭ್ರಮ , ಸಡಗರವು
ನವ ಯುಗದ ಆಗಮನ.
ಹೊಂಗೆಯ ಒಗರು, ಬೇವಿನ ಕಹಿ
ಮಾವಿನ ಹುಳಿಗೆ ಬೆರೆಸಿ ಸಿಹಿ
ಸಮರಸದಿ ಬಾಳು ದೂಡುವ
ಯುಗಾದಿಯ ತತ್ವ ಅರುಹಿ.
✍️ಡಾ ಮಹೇಂದ್ರ ಕುರ್ಡಿ

.gif)

.gif)


0 Comments