ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ. ನೀವ್ಯಾಕೆ ಇನ್ನೂ ಬರೆಯಲಿಲ್ಲ ಅವಳ ಮೇಲೆ ಕವನ.???"

 "ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ. ನೀವ್ಯಾಕೆ ಇನ್ನೂ ಬರೆಯಲಿಲ್ಲ ಅವಳ ಮೇಲೆ ಕವನ.???"



ಎಂದು ಕರೆ ಮಾಡಿ, ಮೆಸೇಜು ಮಾಡಿ ಕೇಳಿದವರಿಗೆಲ್ಲಾ ಅರ್ಪಣೆ ಈ ಸಪ್ತ ಹನಿಗಳು. ರಾತ್ರೋ ರಾತ್ರಿ ಜಗದಗಲ, ಮುಗಿಲಗಲ ವೈರಲ್ ಆದ ಬೆಡಗಿಯ ಚೆಲುವು-ನಿಲುವಿನ ಸುಪ್ತ ಖನಿಗಳು. ವಿಶ್ವವನ್ನೇ ಸೆಳೆದ ಸ್ನಿಗ್ಧ ಸೌಂದರ್ಯದ, ಮುಗ್ಧ ಮಾಧುರ್ಯದ ಕುಂಭಮೇಳದ ಚೆಲುವೆಯ ಕುರಿತಾದ ಕವಿಭಾವ-ಭಾಷ್ಯದ ಆಪ್ತ ದನಿಗಳು. ಒಪ್ಪಿಸಿಕೊಳ್ಳಿ.." - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



1. ಮಿಂಚು.!


ರುದ್ರಾಕ್ಷಿಗಿಂತಲೂ

ಹೆಚ್ಚು ಮಿಂಚಿದ್ದು

ಅವಳ ನೀಲಾಕ್ಷಿ.!


***************


2. ಭ್ರಮೆ.!


ಸೆಲ್ಫಿ ತೆಗೆದುಕೊಂಡವರೆಲ್ಲ

ಖರೀದಿಸಿದ್ದರೆ ರುದ್ರಾಕ್ಷಿ

ನೀಲಾಕ್ಷಿಯಾಗುತ್ತಿದ್ದಳು..

ನಿಜ ಅಕ್ಷರಶಃ ಸೋನಾಕ್ಷಿ.!


******************


3. ಸಂಚಲನ.!


ಕುಂಭಮೇಳದ ಸ್ನಾನಕ್ಕಿಂತ

ಎಲ್ಲೆಲ್ಲು ಅವಳದೇ ಧ್ಯಾನ

ನೀಲಿಕಂಗಳದ್ದೇ ಗುಣಗಾನ.!


***********************


4. ಭಾವ ಭಾಗೀರತಿ.!


ಕೋಟಿ ಕೋಟಿ ಕವಿತೆಗಳಿಗೆ ಕಾರಣ

ರುದ್ರಾಕ್ಷಿ ಮಾರಲು ನಿಂತ ನೀಲಾಕ್ಷಿ

ಕೋಟಿ ಕೋಟಿ ಕವಿತೆಗಳ ಹೂರಣ

ಅವಳ ಮಿಂಚಿನ ನೀಲಿ ರಂಗಿನ ಅಕ್ಷಿ.!


*********************


5. ಮೊನಲಿಸ.!


ಕಂಗಳಲ್ಲಿ ಪುಟಿವ ಚಿರಜೀವನೋತ್ಸಾಹ ಉಲ್ಲಾಸ

ತುಟಿಗಳಲ್ಲಿ ಹೊಳೆವ ಮುಗ್ಧ-ಸ್ನಿಗ್ಧ ಮಂದಹಾಸ

ಮುಂಗುರುಳ ಲಾಸ್ಯಕೆ ಜಗವೆ ನರ್ತಿಸುವಂತೆ ಭಾಸ

ನೀಲ್ಗಣ್ಣ ಮೊನಲಿಸಾ ಸೃಷ್ಟಿಸಿಹಳು ನವಇತಿಹಾಸ.!


**********************


6. ನಯನ ಮನೋಹರ.!


ಅಪ್ಪಟ ನೈಸರ್ಗಿಕ ಚೆಲುವಿಗೆ ಸಾಕ್ಷಿ

ಕುಂಭಮೇಳದಿ ಸುಂದರಿ ನೀಲಾಕ್ಷಿ

ನೋಡಿ ಹುಬ್ಬೇರಿದೆ ಲೋಕದ ಅಕ್ಷಿ.!


************************


7. ವಿಪರ್ಯಾಸ.!


ಕಂಡು ರುದ್ರಾಕ್ಷಿ ಮಾರುವ

ಸುಂದರಿಯ ಕಂಗಳ ನೀಲಿ

ಬಂದವರೆಲ್ಲ ಅವಳ ಸುತ್ತಲು

ಹೋದರು ನಿತ್ಯ ತೇಲಿ ತೇಲಿ

ಕಡೆಗೆ ಬೇಸತ್ತ ಹುಡುಗಿಯೇ

ಮಾಡಿಹಳು ಜಾಗ ಖಾಲಿ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments