ಶುದ್ದ ತರಲೆ ಹನಿಗಳು..


 "ಇಲ್ಲಿವೆ ಶುದ್ಧಾತಿಶುದ್ಧ ಸಪ್ತ ತರಲೆ ಹನಿಗಳು. ನಿಮ್ಮ ಸುಪ್ತ ಮನಸನ್ನೂ, ಗುಪ್ತ ನೋವನ್ನೂ ಕಚಗುಳಿಯಿಟ್ಟು ನಗಿಸಿ ಮೊಗವರಳಿಸುವ ದನಿಗಳು. ಇಲ್ಲಿ ಕೀಟಲೆಯಿದೆ, ತುಂಟತನವಿದೆ, ವಿನೋದವಿದೆ, ವ್ಯಂಗ್ಯವಿದೆ, ವಿಡಂಬನೆಯಿದೆ, ಹಾಸ್ಯವಿದೆ, ಲಾಸ್ಯವಿದೆ.. ಇವೆಲ್ಲದರ ಜೊತೆಗೆ ಕಹಿಸತ್ಯವೂ, ಕಟುವಾಸ್ತವವೂ ಇದೆ.. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಶುದ್ದ ತರಲೆ ಹನಿಗಳು..



1. ಪರಿಣಾಮ.!


ಹೆಂಡತಿ ನಿತ್ಯ ಧಾರವಾಹಿ ನೋಡಿದ್ರೆ

ಅವಳು ಆಗೋಗ್ತಾಳೆ ಭಾರಿ ವಾಚಾಳಿ.!

ನಡುವಿನ ಜಾಹಿರಾತುಗಳ್ನು ನೋಡಿದ್ರೆ

ಅವಳ ಗಂಡನಾಗ್ತಾನೆ ಪಕ್ಕಾ ದಿವಾಳಿ.!


*******************


2. ಗ್ಯಾರಂಟಿ..!


ಎರಡನೇ ಮದುವೆಯೊಂದಿಗೆ

ಮಕ್ಕಳು ಉಚಿತ.!

ಜೊತೆಗೆ ಭರಪೂರ ಬಿಟ್ಟಿ

ಜವಾಬ್ಧಾರಿಗಳು ಖಚಿತ.!


*********************


3. ಮಾನ-ಜೋಪಾನ.!


ಮೇಲ್ಮಹಡಿಯವರು ಬಗ್ಗಿ ನೋಡಿದ್ರೆ ಕಷ್ಟ

ಯಾವುದಕ್ಕೂ ಹೆಣ್ಮಕ್ಮಳು ಮೈಮುಚ್ಕಂಡಿರಿ.!

ಕೆಳಮಹಡಿಯವರು ತಲೆಯೆತ್ತಿ ನೋಡಿದ್ರೆ ನಷ್ಟ

ಯಾವಾಗಲೂ ಗಂಡೈಕಳು ಮಾನ ಮುಚ್ಕೊಂಡಿರಿ.!


********************


4. ಫಲಿತಾಂಶ.!


ನಮ್ಮವ್ವ ಮುಗಿಲು ತೋರ್‍ಸಿ ಉಣ್ಣಿಸಿದ್ದಕ್ಕೆ

ನಾವು ಇಂದು ಚುಕ್ಕಿ-ಚಂದ್ರಮರಾಗಿರೋದು

ನಾವು ಮೊಬೈಲು ತೋರ್‍ಸಿ ಉಣ್ಣಿಸ್ತಿರೋದಕ್ಕೆ

ನಮ್ಮಕ್ಕಳು ಕಾರ್ಟೂನು ಬಫೂನುಗಳಾಗಿರೋದು.!


**********************


5. ಜೋಕೆ.!


ಕಾಲೇಜು ಅಧ್ಯಾಪಕರೆ ವಿಧ್ಯಾರ್ಥಿಗಳಿಗೆ

ಕೊಡಬೇಡಿ ಸಿಕ್ಕಾಪಟ್ಟೆ ಸದರ ಸಲಿಗೆ

ಕಡೆಗೆ ನಿಮ್ಮನ್ನೆ ಎತ್ತಾಕ್ಕೊಂಡು..

ಹೋಗೆ ಬಿಡ್ತಾರೆ ಪಬ್ಬು-ಬಾರಿಗೆ.!


************************


6. ವರನ ಕ್ವಾಲಿಫಿಕೇಶನ್ನು.!


ವಾಟ್ಸಾಪು ಯುನಿವರ್ಸಿಟಿನಾಗೆ ಡಿಗ್ರಿ

ನೂರಾರು ಗ್ರೂಪಿನಾಗೆ ಅಡ್ಮಿನ್ನು ರೀ

ನಿತ್ಯ ಸಾವಿರಾರು ಲೈಕು ಕಾಮೆಂಟ್ರೀ

ರೀಲ್ಸನಲ್ಲಿ ವರಲ್ಡು ಫೇಮಸ್ಸು ರೀ

ನಿಮ್ಕಡೆ ಒಂದು ಕನ್ಯಾ ಇದ್ರೆ ಹೇಳ್ರೀ.!


**********************


7. ಬಾಯಿ ಪಾಡು.!


ಕವಿಭಯಂಕರರ ಕವಿತೆ ಕೊರೆತ ಕೇಳಿ ಕೇಳಿ

ಕವಿಗೋಷ್ಟಿಯಧ್ಯಕ್ಷರ ಕಿವಿ ತೂತು ಬಿದ್ದೋಗ್ತದೆ

ತಮ್ಮ ಭಾಷಣದ ಸರದಿ ಬಂದಾಗ ಅವರಿಗೆ

ಖಾಲಿ ಸಭಾಂಗಣ ನೋಡಿ ಮಾತು ಬಿದ್ದೋಗ್ತದೆ.!



ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments