ಗಗನ ಕುಸುಮ (ಕಾದಂಬರಿ) ಸಂಚಿಕೆ-೮೨
ಹಿಂದಿನ ಸಂಚಿಕೆಯಲ್ಲಿ
ಗಗನ ಮೃತಳಾಗಿರುವುದು ಎಲ್ಲರಿಗೂ ಸಹಿಸಲಾರದ ದುಃಖವಾಗಿರುತ್ತದೆ
ಕಥೆಯನ್ನು ಮುಂದುವರೆಸುತ್ತಾ
ಗಗನಳ ಸಾವು ರಮೇಶ ದೇಸಾಯಿಗೆ ಬರಸಿಡಿಲಿನಂತೆ ಎರಗಿದ್ದು ದುಃಖ ಸಾಗರದಲ್ಲಿ ಮುಳುಗಿರುತ್ತಾರೆ.
ಡಾಕ್ಟರ್ ತಿಳಿಸಿರುವಂತೆ ಗಗನಳ ಶವವನ್ನು ಮನೆಗೆ ಕರೆದೊಯ್ಯಲು ಆಂಬುಲೆನ್ಸ್ ಗೊತ್ತು ಮಾಡಿದ್ದು ಆಂಬುಲೆನ್ಸ್ ಬಂದ ತಕ್ಷಣ ಗಗನಳ ಶವವನ್ನು ಅದರಲ್ಲಿರಿಸಿ
ರಮೇಶ ದೇಸಾಯಿಯು ದುಃಖಭರಿತರಾಗಿ ಆಂಬುಲೆನ್ಸ್ ನಲ್ಲಿ ಕುಳಿತುಕೊಂಡ ತಕ್ಷಣ
ಆಂಬುಲೆನ್ಸ್ ಮನೆ ಕಡೆಗೆ ಹೊರಟಿದ್ದು ಅದರ ಹಿಂದೆ ಗಗನಳ ತಮ್ಮ ಹಾಗೂ ಚೇತನ್ ಬೇರೆ ಕಾರಿನಲ್ಲಿ ಹೊರಟಿದ್ದು
ಸಂಜಯನಿಗೆ ಏನು ಮಾಡಲು ತೋಚದೆ ಕಡೆಗೆ ಆಂಬುಲೆನ್ಸ್ ಜೊತೆಗೆ ಹೋಗಲು ನಿರ್ಧರಿಸಿ ತನ್ನ ಕಾರಿರುವಲ್ಲಿಗೆ ಹೋಗುತ್ತಿರುವುದನ್ನು ಅವರಪ್ಪ ನೋಡಿ
ಲೇಯ್ ಸಂಜಯ್ ನೀನೆಲ್ಲಿ ಹೊರಟೆ ಎಂದು ಹೇಳಿ ಮಗನನ್ನು ತಡೆದು ನಿಲ್ಲಿಸಿದಾಗ
ಅಪ್ಪಾ…..ಆದೂ ….ಗಗನಳ ಮನೆಗೆ ಹೋಗುತ್ತಿದ್ದೇನೆ
ಇನ್ನೆಲ್ಲಿಯ ಗಗನಾ ….ಸಂಜಯ್ ?
ಅವರಪ್ಪನ ಮನೆಗೆ ಹೋಗಿ ನಂತರ ಶವ ಸಂಸ್ಕಾರ ಮಾಡುವ ಕಡೆ ಹೋಗುತ್ತೇನೆ
ನೀನು ರಮೇಶ ದೇಸಾಯಿ ಮನೆಗೆ ಹೋಗುತ್ತೀಯಾ? ನಿನಗೇನಾದರೂ ಬುದ್ದಿ ಇದೆಯಾ? ಅವಳೇನು ನಿನ್ನ ಕೈ ಹಿಡಿದ ಪತ್ನಿಯಾ?
ಆದರೂ ನಾವಿಬ್ಬರೂ ಪ್ರೀತಿಸಿದ್ದೆವು ಸ್ನೇಹಿತೆ ಎಂದು ಹೋಗುತ್ತೇನೆ
ಪ್ರೀತಿಸುವ ನಾಟಕವಾಡಿ ಮೋಸ ಮಾಡಿದವಳು ನಿನ್ನ ಸ್ನೇಹಿತೆಯಾ ನೀನು ಹೋಗಬೇಡಾ ಇಲ್ಲೇ ಅಂತಿಮ ದರ್ಶನವಾಗಿದೆಯಲ್ಲಾ,
ಆದರೂ ಅಪ್ಪಾ
ಬೇಡಾ ಮಗನೇ ನೀನು ಅಲ್ಲಿ ಹೋದರೂ ಮರ್ಯಾದೆ ಇರುವುದಿಲ್ಲ
ಸತ್ತ ಮನೆಯಲ್ಲೇನು ಮರ್ಯಾದೇ ಅಪ್ಪಾ?
ಹಾಗಲ್ಲಾ ನಿನ್ನನ್ನು ಪ್ರೀತಿಸುತ್ತಿದ್ದೇನೆಂದು ನಾಟಕವಾಡಿ ಚೆನ್ನಾಗಿದ್ದ ಕುಟುಂಬದಲ್ಲಿ ಅಶಾಂತಿ ಮೂಡಿಸಿ ನಿನ್ನನ್ನು ಹೆಂಡತಿಯಿಂದ ಶಾಶ್ವತವಾಗಿ ದೂರ ಮಾಡಿದ್ದವಳ ಮನೆಗೆ ಹೋಗುತ್ತೀಯಾ?
ಸತ್ತವರ ಮೇಲೇಕೆ ದ್ವೇಷ?
ನಾನು ಯಾವತ್ತೂ ಯಾರನ್ನೂ ದ್ವೇಷಿಸುವುದಿಲ್ಲ ಆದರೆ ಗಗನ ತಾನು ಸಾಯುತ್ತೇನೆಂದು ಗೊತ್ತಿದ್ದರೂ ಕಡೇವರೆಗೂ ನಿನ್ನಲ್ಲಿ ಸೇಡಿನ ಆಟವಾಡಿದ್ದು ಜೀವವಿರುವರೆಗೂ ತನ್ನಲ್ಲಿ ವಿಷವಿಟ್ಟುಕೊಂಡೇ ಕೊನೆಯುಸಿರೆಳೆದಿದ್ದಾಳೆ. ಅವಳು ಸತ್ತರೂ ಕನಿಕರ ಪಡಲು ಕ್ಷಮಾಪಣೆಗೆ ಅರ್ಹಳಲ್ಲ ನೀನು ಹೋಗಬೇಡ ಸಂಜಯ್ ಈಗಲಾದರೂ ಪೀಡೆ ತೊಲಗಿತೆಂದು ನಿನ್ನ ಸಂಸಾರವನ್ನು ನೆಟ್ಟಗೆ ಮಾಡಿಕೊಳ್ಳುವುದನ್ನು ನೋಡಿಕೋ?
ಅಪ್ಪಾ ಇದೇನು ಹೀಗೆ ಹೇಳುತ್ತಿದ್ದೀಯಾ?
ಹೌದು ಸಂಜಯ್ ನೀನು ಆ ಮಾಟಗಾತಿಯನ್ನು ನಂಬಿ ನಿನ್ನ ಹೆಂಡತಿಗೆ ಡೈವೋರ್ಸ್ ಕೊಟ್ಚೆ ಮಕ್ಕಳನ್ನು ದೂರ ಮಾಡಿದೆ ಈಗಲಾದರೂ ತಪ್ಪನ್ನು ತಿದ್ದಿಕೊಂಡು ಮೊದಲಿನಂತೆ ಸಂಸಾರ ಮಾಡುವುದನ್ನು ಕಲಿ ಮೊದಲು ನಿನ್ನ ಮಗುವನ್ನು ನೋಡಲು ಬಾ ನಂತರ ಮುಂದೆ ಏನು ಮಾಡಬೇಕೋ ನೋಡೋಣ
ನಾನು ಡೈವೋರ್ಸ್ ಕೊಟ್ಟಿದ್ದೇನೆ ಮೊದಲಿನಂತೆ ಹೇಗೆ ಕುಟುಂಬವನ್ನು ನಡೆಸಲು ಸಾಧ್ಯ?
ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದೇ ಇರುತ್ತದೆ ಪರಿಹಾರವಿಲ್ಲದ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಇನ್ನಾದರೂ ನನ್ನ ಮಾತು ಕೇಳುತ್ತೀಯಾ ಎಂದರೆ ನನ್ನ ಜೊತೆಗೆ ಬಾ ಎಂದು ಹೇಳಿ ಮಗುವನ್ನು ಸೇರಿಸಿದ್ದ ವಾರ್ಡಿಗೆ ಹೋಗುತ್ತಿರಲು
ಸಂಜಯನ ತಂದೆ ಹಿಂದಿರುಗಿ ಮಗ ತನ್ನನ್ನು ಹಿಂಬಾಲಿಸುತ್ತಿರುವುದನ್ನು ನೋಡಿ ಸೀದಾ ಮಗುವಿದ್ದ ವಾರ್ಡ್ ಗೆ ಬಂದಾಗ
ಸಂಜಯನೂ ವಾರ್ಡಿನ ಬಾಗಿಲಲ್ಲಿ ನಿಲ್ಲಲು
ಬಾ ಒಳಗೆ ಸಂಜಯಾ ಮಲಗಿರುವ ನಿನ್ನ ಮಗನನ್ನು ನೋಡು ಎಂದರೂ ವಾರ್ಡಿನೊಳಗೆ ಹೋಗಲು ಹಿಂದೇಟು ಹಾಕುತ್ತಿದ್ದು
ಇದನ್ನು ಅರಿತ ಕುಸುಮಳ ತಾಯಿ ಏನೂ ಮಾತನಾಡದೆ ಹೊರಗೆ ಬಂದ ನಂತರ
ಸಂಜಯನು ವಾರ್ಡಿನೊಳಗೆ ಹೋಗಿ ಮಗನನ್ನು ದಿಟ್ಟಿಸಿ ನೋಡುತ್ತಿರುವಾಗ ತನಗರಿವಿಲ್ಲದಂತೆ ಕಣ್ಣೀರ ಕೋಡಿ ಹರಿದಿದ್ದು ಬೆಳಿಗ್ಗೆಯಿಂದ ತಡೆದಿದ್ದ ದುಃಖ ಒಮ್ಮೆಲೇ ಹೊರ ಬಂದು ಬಿಕ್ಕಿ ಬಿಕ್ಕಿ ಅಳುತ್ತಾ ಈಗ ನನಗೆ ಯಾರೂ ಇಲ್ಲದಂತಾಗಿದೆ ಎನ್ನಲು
ಹಾಗೇಕೆ ಹೇಳುತ್ತೀಯಾ ಸಂಜಯ್ ನಾವೆಲ್ಲರೂ ನಿನ್ನ ಜೊತೆಗೆ ಇರುತ್ತೇವೆ ಯೋಚಿಸಬೇಡ ಯಾರೋ ಮೋಸ ಮಾಡಿದರೆಂದು ನಾವುಗಳು ನಿನಗೆ ಮೋಸ ಮಾಡುವುದಿಲ್ಲ ಅದೊಂದು ಕೆಟ್ಟ ಕನಸೆಂದು ಮರೆತು ಬಿಡು ಎಂದಾಗ
ಅಪ್ಪಾ ನಾನು ಕ್ಷಮೆಗೆ ಅರ್ಹನಲ್ಲಪ್ಪಾ ನನ್ನನ್ನು ಬಿಟ್ಟು ಬಿಡಿ ನನ್ನ ಪಾಡಿಗೆ ನಾನು ದೂರ ಹೋಗುತ್ತೇನೆ
ಬೇಡಾ ಮಗನೇ ಹೆಂಡತಿ ಮಕ್ಕಳು ಆಪ್ಪ ಅಮ್ಮ ನನ್ನು ಅನಾಥರನ್ನಾಗಿ ಮಾಡಿ ಹೋಗಬೇಡ
ಒಂದೆರಡು ದಿನವಷ್ಟೇ ಎಲ್ಲವೂ ಸರಿ ಹೋಗುತ್ತದೆಂದು ಹೇಳಿ ಸಮಾಧಾನ ಮಾಡುತ್ತಿರುವಾಗ
ಮೆಡಿಸನ್ ತರಲು ಹೋಗಿದ್ದ ಕುಸುಮ ಬಂದು ವಾರ್ಡಿನಲ್ಲಿ ಅಪ್ಪ ಮಗ ಇಬ್ಬರು ಮಾತನಾಡುತ್ತಿರುವುದನ್ನು ನೋಡಿ ಅಲ್ಲೇ ನಿಲ್ಲುತ್ತಾಳೆ
ಮಗು ಅಮ್ಮನನ್ನು ನೋಡಿ ಅಮ್ಮಾ ಅಪ್ಪ ಬಂದಿದೆ ನನ್ನ ಖಾಯಿಲೆ ಎಲ್ಲಾ ವಾಸಿಯಾಗೋಯ್ತು ಎನ್ನಲು
ಕುಸುಮ ಏನೂ ಮಾತನಾಡದೆ ವಾರ್ಡಿನಿಂದ ಹೊರಬಂದು ಅವರಮ್ಮನ ಬಳಿ ಹೋಗಿ
ಅಮ್ಮಾ ನಿನ್ನ ಮಾಜಿ ಅಳಿಯ ಬಂದಿದ್ದಾರೆ
ಗೊತ್ತು ಕಣಮ್ಮಾ ಅವನನ್ನು ನೋಡಿಯೇ ನಾನು ಇಲ್ಲಿ ನಿಂತಿದ್ದೇನೆ
ಈಗ ಅವರಿಗೆ ನಾವುಗಳು ಜ್ಞಾಪಕಕ್ಕೆ ಬಂದೆವು ಆ ಮಾಟಗಾತಿ ಬದುಕಿದ್ದರೆ ನಾವ್ಯಾರೂ ಬೇಕಿರಲಿಲ್ಲ
ಹೌದು ಕುಸುಮ ಹೊಸ ನೀರು ಬಂದು ಹಳೇ ನೀರು ಕೊಚ್ಚಿಕೊಂಡು ಹೋಯ್ತು ಎನ್ನುತ್ತಾರೆ ಈಗ ಹೊಸನೀರು ಹೋದ ನಂತರ ಹಳೆಯ ನೀರು ಹಾಗೇ ನಿಂತಿದೆ ಎನ್ನುವಂತಾಯ್ತು ಅವರನ್ನು ಮಾತನಾಡಿಸಿ ಬಂದೆಯಾ?
ನಾನೇಕೆ ಮಾತನಾಡಿಸಲಿ? ಅವರ ಸಹವಾಸವೇ ಬೇಡಮ್ಮಾ
ಅವರು ಬಹಳ ನೊಂದಿರುವಂತಿದೆ ಕಣೇ ಕುಸುಮಾ
ಕುಸುಮ ನಗುತ್ತಾ ಅವರನ್ನು ನೊಂದುಕೊಳ್ಳಿ ಎಂದು ಯಾರು ಹೇಳಿದ್ರು? ಅವತ್ತೇ ಅವಳನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಿದ್ದರೆ ಈ ದಿನ ಈ ರೀತಿ ಇರುವ ಸನ್ನಿವೇಶವೇ ಬರುತ್ತಿರಲಿಲ್ಲ
ಆ ವೇಳೆಗೆ ಕುಸುಮಳ ಅಪ್ಪ ಬಂದು
ಇದೇನು ವಾರ್ಡಿನಲ್ಲಿ ಮಗು ಒಂದನ್ನೇ ಬಿಟ್ಟು ಅಮ್ಮ ಮಗಳು ಇಬ್ಬರೇ ಹೊರಗೆ ಬಂದು ಮಾತನಾಡುತ್ತಿದ್ದೀರಿ? ಮಗು ಮಲಗಿದೆಯಾ?
ವಾರ್ಡಿನೊಳಗೆ ಅಪ್ಪ ಮಗ ಮಾತನಾಡುತ್ತಿದ್ದಾರೆ ಅದಕ್ಕೆ ಹೊರಗೆ ಬಂದ್ವಿ
ಓ ಈಗ ಹೆಂಡತಿ ಮಕ್ಕಳು ನೆನಪಾಯ್ತಂತಾ?
ಇಂತಹವರನ್ನು ಹತ್ತಿರವೂ ಸೇರಿಸಬಾರದು ಕ್ಷಮಿಸಲೂ ಬಾರದು ಎನ್ನುತ್ತಾರೆ.
ಹೇಗಿದ್ದರೂ ಡೈವೋರ್ಸ್ ಆಗಿದೆ ಅವರ ಪಾಡಿಗೆ ಅವರಿರಲಿ ನಮ್ಮ ಪಾಡಿಗೆ ನಾವು ಇರೋಣವೆಂದು ಅವರಮ್ಮ ಧ್ವನಿಗೂಡಿಸಿದಾಗ
ಹಾಗೇ ಆಗಲಿ ಅಮ್ಮ ಎಂದು ಕುಸುಮ ನುಡಿಯಲು
ನನ್ನ ಮಗಳೇ ಧೈರ್ಯವಾಗಿರಬೇಕಾದರೆ ನಾವೇಕೆ ಹೆದರಬೇಕು ಅಲ್ಲವೇ ಎಂದು ಕುಸುಮಳ ಅಪ್ಪ ಮಾತನಾಡಿ ಎರಡು ಹೆಜ್ಜೆ ಮುಂದಿಟ್ಚಾಗ
ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಗಂಡನನ್ನು ಪ್ರಶ್ನಿಸಲು
ವಾರ್ಡಿಗೆ ಹೋಗುತ್ತಿದ್ದೇನೆ ಮಗು ಏನಾದರೂ ಅಳುತ್ತಿದ್ದರೆ ಸಮಾಧಾನ ಮಾಡುತ್ತೇನೆ
ಅಪ್ಪ ಮಗ ಹೊರಗೆ ಬರಲಿ ನಂತರ ಹೋಗುವಿರಂತೆ ಎಂದಾಗ
ಡಾಕ್ಟರ್ ಬಳಿ ಹೋಗಿ ಬರುತ್ತೇನೆಂದು ಹೇಳಿ ಡಾಕ್ಟರ್ ಛೇಂಬರ್ ಗೆ ಬಂದು ನಮಸ್ಕಾರ ಸಾರ್ ಎಂದ ತಕ್ಷಣ
ಡಾಕ್ಟರ್ ಪ್ರತಿ ನಮಸ್ಕಾರ ಹೇಳಿ ಬಂದ ವಿಷಯ ಹೇಳಿ ಎನ್ನಲು
ಮಗುವಿನ ಆರೋಗ್ಯ ವಿಚಾರಿಸಲು ಬಂದೆ ಇನ್ನೂ ಎಷ್ಟು ದಿನ ಆಸ್ಪತ್ರೆಯಲ್ಲಿರಬೇಕು ಸಾರ್
ಮೊನ್ನೆ ಟೆಸ್ಟ್ ಮಾಡಿರುವ ರಿಪೋರ್ಟ್ ಇನ್ನೂ ಬಂದಿಲ್ಲ ರಿಪೋರ್ಟ್ ನೋಡಿ ಹೇಳುತ್ತೇನೆಂದಾಗ
ಆಗಬಹುದು ಸಾರ್ ಎಂದು ಹೇಳಿ ವಾಪಸ್ಸಾಗುತ್ತಾರೆ.
ಸಂಜಯನು ಮಗುವನ್ನು ನೋಡಿಕೊಂಡು ಹೊರಗೆ ಬಂದು ಅಪ್ಪಾ ಮನೆಗೆ ಬನ್ನಿ ಎಂದು ದೀನತೆಯಿಂದ ಕೇಳಲು
ನಿನಗೆ ಬುದ್ದಿ ಬಂತಲ್ಲಾ ಖಂಡಿತಾ ಬರುತ್ತೇವೆ
ಈ ದಿನವೇ ಹೊರಟು ಬನ್ನಿ ಎಂದು ಒತ್ತಾಯ ಮಾಡುತ್ತಾನೆ
ಮಗುವನ್ನು ಮನೆಗೆ ಕರೆದುಕೊಂಡು ಬಂದ ತಕ್ಷಣ ಬಂದು ಬಿಡುತ್ತೇವೆಂದರೂ ಬಿಡದೆ ಇಂದೇ ಬರಬೇಕು ನಮ್ಮ ಮನೆಯಿಂದಲೇ ಆಸ್ಪತ್ರೆಗೆ ಬನ್ನಿ ನಾನು ಕಾರಿನಲ್ಲಿ ಕರೆದುಕೊಂಡು ಬರುತ್ತೇನೆಂದು ಹೇಳಿದಾಗ
ನಿಮ್ಮಮ್ಮನು ಏನು ಹೇಳುತ್ತಾಳೋ ನೋಡು ಮನೆಗೆ ಬರಲು ಮೊದಲು ಅವಳನ್ನು ಒಪ್ಪಿಸು ನಂತರ ಬರುತ್ತೇನೆ ಎನ್ನಲು
ಈಗ ಅಮ್ಮ ಎಲ್ಲಿದ್ದಾರೆ ಎಂದು ಪ್ರಶ್ನಿಸಿದಾಗ
ಅಮ್ಮ ಇನ್ನೂ ಬಂದಿಲ್ಲ ಮನೆಯಲ್ಲೇ ಇದ್ದಾಳೆ
ಅಮ್ಮ ಬಂದ ನಂತರ ಬರುತ್ತೇನೆಂದು ಹೇಳಿ ಹೊರಡುತ್ತಾನೆ
ಸಂಜಯನು ಹೋದ ನಂತರ
ಕುಸುಮ ಕುಸುಮಳ ಅಮ್ಮ ಇಬ್ಬರೂ ವಾರ್ಡಿನೊಳಗೆ ಬಂದಾಗ
ವಿಷಯ ತಿಳೀತಾ ಕುಸುಮಾ?ಎಂದು ಅವರ ಮಾವ ಕೇಳಲು
ಏನು ಮಾವ?
ನಿನ್ನ ವೈರಿ ಜೀವನ ಯಾತ್ರೆ ಮುಗಿಸಿದಳು
ಗೊತ್ತಾಯ್ತು ಮಾವಾ ಅವಳು ಸತ್ತಿದ್ದಕ್ಕೆ ದುಃಖವೂ ಇಲ್ಲಾ ಸಂತೋಷವೂ ಇಲ್ಲಾ ತಾನೂ ಬದುಕದೆ ಇರುವವರೆಗೂ ಬೇರೆಯವರಿಗೆ ತೊಂದರೆ ಕೊಟ್ಟು ವಿಕೃತ ಆನಂದ ಪಡುತ್ತಿದ್ದಳು ದೇವರು ಅದಕ್ಕೆ ಬೇಗ ಕರೆಸಿಕೊಂಡ ಎನ್ನಿಸುತ್ತದೆ
ನಿನ್ನ ಮಾತು ನಿಜ ಕಣಮ್ಮಾ ಯಾರು ಎಷ್ಟೇ ಕೆಟ್ಟವರಾದರೂ ಅವರ ಸಾವಿನಲ್ಲಿ ಸಂಭ್ರಮಿಸಬಾರದೆಂಬ ನಿನ್ನ ಆಲೋಚನೆ ಮೆಚ್ಚಬೇಕಾದ್ದೆ ಎನ್ನುತ್ತಾರೆ
ಆ ವೇಳೆಗೆ ಕುಸುಮಳ ತಂದೆ ಬಂದು ಏನು ರಘುರಾಂ ರವರೇ ಬೆಳಿಗ್ಗೆಯಿಂದ ಪತ್ತೆಯೇ ಇಲ್ಲಾ?
ನಿಮಗೆ ವಿಷಯ ತಿಳಿಯಲಿಲ್ಲವಾ?
ನನಗೆ ತಿಳಿಯುವ ವೇಳೆಗೆ ಶವವನ್ನು ಆಂಬುಲೆನ್ಸಲ್ಲಿ ಇಡುತ್ತಿದ್ದರು ನೋಡಿಕೊಂಡು ವಾಪಸ್ ಬಂದು ಬಿಟ್ಟೆ ರಘುರಾಂ ಎಂದು ಹೇಳಿ ಮಾತು ಮುಂದುವರೆಸಿರುತ್ತಾರೆ
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments