*ಕಾವ್ಯಧಾರೆ*
*ಸರ್ವಜನಾಂಗದ ಶಾಂತಿಯ ತೋಟದೊಳಗೆ ನನ್ನ ವಿಹಾರ*
೧
“ಸರ್ವಜನಾಂಗದ ಶಾಂತಿಯ ತೋಟ”ವೆಂದು ನುಡಿಯುವ ನಾಡಿದು,
ಮಾತಿನ ಮಲ್ಲಿಗೆ ಅರಳಿದರೂ ಮನದಲಿ ಮುಳ್ಳು ಬೆಳೆದಿದು.
ಒಂದೇ ಮಣ್ಣಿನ ಮಕ್ಕಳೆಂದು ವೇದಿಕೆ ಮೇಲೆ ಹಾಡಿದರೂ,
ಜಾತಿಯ ಗೋಡೆ ಮೌನವಾಗಿ ಹೃದಯಗಳ ನಡುವೆ ನಿಂತಿದೆ.
೨
ಕಲೆ ಸಾಹಿತ್ಯದ ದೀಪಗಳು ಬೆಳಗುವ ಕನ್ನಡ ಭುವಿಯಲ್ಲಿ,
ಮಾನವೀಯ ಮಮತೆಯ ಮಳೆ ಯಾಕೋ ಇಂದು ಕಡಿಮೆಯಾಗಿದೆ.
ಬರಹಗಳಲ್ಲಿ ಪ್ರೀತಿಯ ಮಾತು ಬದುಕಲ್ಲಿ ಕಾಣದಾಗ,
ಸಹೋದರತೆಯ ಹಕ್ಕಿಗಳು ಗೂಡಿಲ್ಲದೆ ಅಲೆದಾಡುತ್ತಿವೆ.
೩
ಭ್ರಾತೃತ್ವದ ಬಾವಿ ಬರಿದಾಗಿ ಸ್ವಾರ್ಥದ ಗಾಳಿ ಬೀಸುತ್ತಿದೆ,
ಸಂಸ್ಕೃತಿಯ ಹೆಸರಲಿ ಕೆಲವೆಡೆ ಸಂಕುಚಿತತೆ ಬೆಳೆದಿದೆ.
ಹೃದಯ ವೈಶಾಲ್ಯದ ನೆರಳಲ್ಲಿ ಬದುಕುವ ಜನ ವಿರಳವಾಗಿ,
ಮನದ ಕಿಟಕಿಯು ಮುಚ್ಚಿಕೊಂಡು ಮನುಜ ಮನುಜನ ಮರೆಯುತ್ತಿದ್ದಾನೆ.
೪
ಪರಿವರ್ತನೆಯ ಕಾಲಘಟ್ಟ ಹೊಸ ಕನಸುಗಳ ಕರೆಯುತ್ತಿದೆ,
ಹಳೆಯ ಗೋಡೆ ಒಡೆದು ಹೊಸ ದಾರಿಯ ಬೆಳಕು ಮೂಡುತ್ತಿದೆ.
ಜಾತಿ ಮತದ ಗೆರೆಯನ್ನು ಮೀರಿ ಕೈಗಳು ಒಂದಾದಾಗ,
ಕುವೆಂಪು ಕಂಡ ಕನಸಿನ ತೋಟ ಮತ್ತೆ ಹಸಿರಾಗಬಹುದು.
೫
ನಾಡು ಕೇವಲ ಭೂಮಿಯಲ್ಲ ಅದು ಬದುಕಿನ ಭಾವಗೀತೆ,
ಮನುಜ ಮನುಜನ ಪ್ರೀತಿಸಿದಾಗ ಅರಳುವುದು ಸತ್ಯನೀತಿ.
“ನಾವೆಲ್ಲರೂ ಒಂದೇ” ಎನ್ನುವ ನುಡಿ ತುಟಿಯಲಿ ನಿಲ್ಲದಿರಲಿ,
ಮನದ ಮಣ್ಣಲಿ ಬೇರು ಬಿಟ್ಟು ಬದುಕಿನ ದಾರಿಯಾಗಲಿ.
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments