ಬೆಳಕಿನ ಕಿರಣಗಳ ಚಿಮ್ಮಿಸುವ ಒಂಬತ್ತು ಅಕ್ಷರಪ್ರಣತೆಗಳು.


 "ಇಲ್ಲಿವೆ ಬೆಳಕಿನ ಕಿರಣಗಳ ಚಿಮ್ಮಿಸುವ ಒಂಬತ್ತು ಅಕ್ಷರಪ್ರಣತೆಗಳು. ಬದುಕಿನ ತಾತ್ವಿಕ ಸತ್ವಗಳ, ಮಾರ್ಮಿಕ ಸತ್ಯಗಳ ಪ್ರತಿಫಲಿಸುವ ಭಾವಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಅರಿವಿನ ಸಾರವಿದೆ, ಬದುಕು-ಬೆಳಕಿನ ವಿಸ್ತಾರವಿದೆ. ಇದು ನಮ್ಮ ನಿಮ್ಮದೇ ಬಾಳಿನ ಅನುದಿನದ, ಅನುಕ್ಷಣದ ನಿತ್ಯ ಸತ್ಯಗಳೂ ಹೌದು. ಜಗದ ಯುಗ ಯುಗದ ಚಿರಂತನ ವಾಸ್ತವವೂ ಹೌದು. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 



1. ಕಾರುಣ್ಯ.!


ಕೊಲ್ಲುವವರ ಕುರಿತೇಕೆ ಭಯ ಭೀತಿ

ಹಿರಿದಿದೆ ಕಾಯುವವನ ಪ್ರೀತಿ ನೀತಿ

ಕೇಡೆಣಿಸುವವನ ಮಾತ್ಸರ್ಯಕಿಂತಲು

ಕಾಪಾಡುವವನ ಔದಾರ್ಯಕ್ಕಿದೆ ಶಕ್ತಿ.!


**************************


2. ಮರುಳ.!


ಬರುವಾಗ ಒಂಟಿ, ಹೋಗುವಾಗ ಒಂಟಿ

ಮತ್ತೇಕೆ ಸುಖಾಸುಮ್ಮನೆ ನರಳುತ್ತೀಯೋ

ಕಟ್ಟಿಕೊಂಡು ನಂಟು-ಗಂಟುಗಳ ಘಂಟಿ.!


***********************


3. ಪ್ರಜ್ಞೆ.!


ಬೆಳಕಿನ ಸಾಕ್ಷೀಪ್ರಜ್ಞೆಗಿಂತಲೂ

ನಿತ್ಯ ಬದುಕಿನ ಪಾಪಪ್ರಜ್ಞೆಗಳೇ

ಹೆಚ್ಚಾದಾಗ.... ಹುಚ್ಚಾದಾಗ....

ಅಡಿಗಡಿಗೂ ದುಃಖ ನೋವು.!

ಅನುಕ್ಷಣವು ಸೋಲು ಸಾವು.!


********************


4. ಅರಿವು.!


ಅರಿವೆ ಇರದಿರೆ ಜನರೆದುರು ನೀ ಬೆತ್ತಲು

ಅರಿವು ಇರದಿರೆ ನಿನ್ನೊಳಗೆ ನೀನೆ ಬೆತ್ತಲು

ಒಳ ಹೊರಗೂ ನಿನಗೆ ನಿತ್ಯ ಬರೀ ಕತ್ತಲು 

ಅಡಿಗಡಿಗು ಜಗದೆದುರು ನೀ ಬಟಾಬಯಲು.!


*********************


5. ಚೋದ್ಯ.!


ಗೆಳೆಯ ನೀನು ಅರಿವುದಿರಲಿ, ಅರ್ಥೈಸುವುದಿರಲಿ

ಕನಿಷ್ಟ ನೀ ಓದಲೂ ಆಗದು ನಿನ್ನದೇ ಹಣೆಬರಹ

ಮತ್ತೆ ಹೇಗೆ ಬರೆವೆಯೋ ಅನ್ಯರ ಬದುಕಿನ ಬರಹ.!


*********************


6. ಬದುಕು.!


ನಂಟಿರಬೇಕು ಅಂಟಿಕೊಳ್ಳದಂತೆ

ಗಂಟಿರಬೇಕು ಕಗ್ಗಂಟಾಗದಂತೆ

ಇರಬೇಕು ಇದ್ದೂ ಇರಲಾರದಂತೆ

ಅವ ಕರೆದಾಗೆದ್ದು ಹೋಗುವಂತೆ.!


********************


7.ಚಿರಸತ್ಯ.!


ಪಾಲಿನ ಪಂಚಾಮೃತ ಸ್ವೀಕರಣೆ ಬಾಳತತ್ವ

ಪ್ರತಿಕ್ಷಣ ಆಸ್ವಾಧನೆಯಲ್ಲಿಹುದು ನಿಜಸತ್ವ

ನಮ್ಮೆಲ್ಲ ನಗು ನಲಿವಿಗೆ ನಮ್ಮದೇ ನೇತೃತ್ವ

ನಮ್ಮ ಬದುಕಿಗೆ ನಮ್ಮದೇ ಉತ್ತರದಾಯಿತ್ವ.!


****************


8. ಪ್ರಾಪ್ತಿ.!


ದಕ್ಕಲು ಪ್ರತಿ ಅಣುರೇಣು ತೃಣ

ಜೀವಕ್ಕಿರಬೇಕು ಜನ್ಮಗಳ ಋಣ

ಸಿಕ್ಕಲು ಪ್ರತಿಭಾಗ್ಯದ ಕಣ ಕ್ಷಣ

ಬದುಕಿನಲಿ ಬರೆದಿರಬೇಕು ಕಾಣ.!


******************


9. ಜೀವನ.!


ತ್ಯಾಗ ಭೋಗಗಳ ನಡುವಿನ

ನಿತ್ಯ ಸಮತೋಲನವೇ ಜೀವನ

ಸೌಭಾಗ್ಯ ವೈರಾಗ್ಯ ನಡುವಿನ

ಆರೋಗ್ಯಕರ ಜೀವಯಾನ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments