ಕಮನೀಯ ನಂದೀಶ*

 *ಕವನ ಲಲಿತಲಯದಲ್ಲಿ ಚೌಪದಿ*


*ಕಮನೀಯ ನಂದೀಶ*



ಯೋಚಿಸುವ ಯಾತನೆಯ ನೀಡದಿರು ಪರಮೇಶ

ಯಾಚಿಸುವೆ ನೀಡು ಶಿವ ಮನಕೆ ಶಾಂತಿ|

ವಾಚಿಸುತ ಹರನಾಮ ತೋರುವೆನು ಭಕ್ತಿಯನು

ಯೋಚಿಸದೆ ಕಳೆ ನನ್ನ ಮನದ ಭೀತಿ||


ಹಿಮಗಿರಿಯ ಶಿಖರದಲಿ ನೆಲೆಸಿರುವ ಗಣಪಪಿತ

ನಮನವನು ಸಲ್ಲಿಸುವೆ ನಿನ್ನ ಪದಕೆ|

ಕಮನೀಯ ನಂದೀಶ ಬೇಡುವೆನು ಕೈವಲ್ಯ

ಭ್ರಮೆನೀಗಿ ಹರಸಯ್ಯ ನನ್ನ ಹಿತಕೆ||


ಚಂದಿರನ ಮುಡಿದವನೆ ನಾಗಾಭರಣ ಭರ್ಗ

ಇಂದೆನಗೆ ಕರುಣಿಸೈ ಸುಜ್ಞಾನವ|

ಬಂಧುಬಾಂಧವ ನೀನೆ ಗರಲಧರ ಶಂಕರನೆ

ಕುಂದನ್ನು ಲೆಕ್ಕಿಸದೆ ಸಲಹು ದೇವ||


ಕರುಣಸಾಗರ ನೀಲಕಂಠ ಹರ ಗೌರೀಶ

ಚರಣಕಮಲದಲೆರಗಿ ಶರಣಾಗುವೆ|

ತರಣಿಕಾಶನೆ ಭಕ್ತ ಜನಕಾಶ್ರಯನು ನೀನು

ವರವಿತ್ತು ಕಾಪಾಡು ನಾ ಬೇಡುವೆ||


ಬೂದಿಯನು ಬಳಿದವನೆ ಲಯಕರ್ತ ಶಿವಶಂಭು

ಹಾದಿಯನು ತೋರಿಸೈ ಕೈಲಾಸಕೆ|

ವೇದನೆಯ ಕಳೆಯುತ್ತ ಸುಜ್ಞಾನ ತುಂಬುತ್ತ

ಮೋದದಿಂ ಹಾರೈಸು ಕಲ್ಯಾಣಕೆ||


*ಅಶ್ವತ್ಥನಾರಾಯಣ*

   *ಮೈಸೂರು*

Image Description

Post a Comment

0 Comments