"ಇದು ಕಂಬನಿಯ ಕವಿತೆಯಲ್ಲ, ಕಪೋಲಗಳ ಮೇಲೆ ಕಂಬನಿಯೇ ಬರೆವ ಭಾವಗೀತೆ. ಪ್ರತಿ ಕಂಬನಿಯ ಬಿಂದುವಿನಲೊಂದು ಕಾಣದ ಕಥೆಯಿದೆ. ಪ್ರತಿ ಕಣ್ಣೀರ ಹನಿಯ ಹಿಂದೊಂದು ಕೇಳದ ವ್ಯಥೆಯಿದೆ. ಕಣ್ಣಂಚನು ತೇವವಾಗಿಸುವ ಆ ಕ್ಷಣಗಳಲಿ ಆ ಜೀವಕ್ಕಷ್ಟೇ ಗೊತ್ತಿರುವ ನೋವಿನ ಸಂವೇದನೆಗಳಿರುತ್ತವೆ. ಕಣ್ಣಾಲಿ ತುಂಬಿ ಬರುವ ಆಘಳಿಗೆಯಲಿ ಆ ಹೃದಯಕ್ಕಷ್ಟೇ ರಿಂಗಣಿಸುವ ನೆನಪಿನ ನಿವೇದನೆಗಳಿರುತ್ತವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಕಂಬನಿ..!
ಯಾವ್ಯಾವ ಮಾತು
ಯಾರ್ಯಾರ ಮನ
ಮುಟ್ಟುವುದೋ.?
ಯಾರ್ಯಾರ ಒಡಲ
ಆಳದಲಿ ಅದೇನು
ಕಥೆಗಳಿವೆಯೋ.?
ಯಾವ್ಯಾವ ಹಾಡು
ಯಾರ್ಯಾರ ಹೃದಯ
ತಟ್ಟುವುದೋ..?
ಯಾರ್ಯಾರ ಎದೆ-
ಗೂಡಿನಲಿ ಅದೆಷ್ಟು
ನೆನಪುಗಳಿವೆಯೋ.?
ಮಾತು ಮನವ
ತಾಕಿದಾಗ.....
ಹಾಡು ಹೃದಯ
ಮೀಟಿದಾಗ.....
ಒಡಲಿನ ಕಥೆ
ಒಳಗಿನ ನೆನಪು
ಕಂಗಳ ಮುತ್ತಾಗಿ
ಮೆಲ್ಲನೆ ಜಾರುವುದು..!
ಕಣ್ಣಬಿಂದು ಎದೆಯ
ಸಿಂಧುವಿನ ಬಿಂಬವಾಗಿ
ಕದಪುಗಳಲಿ
ಕಾವ್ಯ ಬರೆವುದು.!!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments