"ಇಲ್ಲಿವೆ ಚಿತ್ತವಿಕಾರದ ಅಂಶಗಳನ್ನು ಅನಾವರಣಗೊಳಿಸುವ ಆರು ಹನಿಗಳು.
ಮುಗುಳ್ನಗೆ ಕಳೆದು ಮನವನ್ನು ಮಸಣವಾಗಿಸಿ ಮಾರ್ದನಿಸುವ ವಿಕ್ಷಿಪ್ತ ರಿಂಗಣಗಳ ಖನಿಗಳು. ಬದುಕನ್ನು ಬರಡಾಗಿಸಲು ಕಾರಣವಾಗುವ ದನಿಗಳು. ಮೇಲರಿಮೆ ಎನ್ನಿ, ಕೀಳರಿಮೆ ಎನ್ನಿ. EGO ಎನ್ನಿ, ಆತ್ಮರತಿ ಎನ್ನಿ, ಅಹಮಿಕೆಯ ಮದವೆನ್ನಿ.. ಒಟ್ಟಿನಲ್ಲಿ ಈ ವಿಕಾರಗಳು ನಮಗೆ ನಾವೇ ಕೋಟೆ ಕಟ್ಟಿಕೊಂಡು ನರಳುವಂತೆ ಮಾಡಿ ಬದುಕಿನ ಬೆಳಕನ್ನೇ ಕಳೆದುಬಿಡುತ್ತವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
1. ಪರಿತಾಪ.!
ನಾವೆ ನಮ್ಮಯ ಸುತ್ತ
ಕಟ್ಟಿಕೊಂಡರೆ ಹುತ್ತ..
ಬದುಕು ಮೈಲುತುತ್ತ.!
**************
2. ಯಶೋ ಮರ್ಮ.!
ಬಾಗಿದರೆ ಇಲ್ಲಿ ಸಾಧನೆ
ಯಶಸ್ಸಿನ ಅನುಮೋದನೆ
ಬೀಗಿದರೆ ಬರೀ ವೇದನೆ
ಬಾಳು ಶೂನ್ಯಸಂಪಾದನೆ.!
**************
3. ವಿಪರ್ಯಾಸ.!
ನಾವುಗಳೆ ನಿರ್ಮಿಸಿಕೊಂಡ ಕೋಟೆಯೊಳಗೆ
ನಮ್ಮೆದೆಗೆ ಬೆಂಕಿಯಿಟ್ಟುಕೊಂಡು ಬೇಯುತ್ತೇವೆ.!
ಸ್ವಯಂ ಸಂಕೋಲೆ ಬಿಗಿದುಕೊಂಡು ಕೈಗಳಿಗೆ
ಜಗವನೆಲ್ಲ ದೋಷಿಸಿಕೊಂಡು ನೋಯುತ್ತೇವೆ,!
*******************
4. ಮದ್ದಿಲ್ಲ.!
ತಲೆಭಾರಕೆ ಮುಲಾಮಿದೆ
ತಲೆಶೂ್ಲೆಗೂ ಮದ್ದಿದೆ
ತಲೆಯೇ ಭಾರವಾಗಿ
ಶೂಲವಾದರೆ ಮದ್ದು
ಮುಲಾಮಾದರು ಎಲ್ಲಿದೆ?
*******************
5. ತಲೆದಂಡ.!
ಕೆಳಗಿರಿಸದಿರೆ ಶಿರವೇರಿಸಿಕೊಂಡ
ಭ್ರಮೆ ಭ್ರಾಂತಿಗಳ ಟೋಪಿ
ಬದುಕಿನ ಶಾಂತಿ ನೆಮ್ಮದಿಗಳ
ತಲೆದಂಡವಾದೀತು ಪಾಪಿ.!
********************
6. ಗೂಡು.!
ಗೂಡುಕಟ್ಟಿಕೊಂಡರೂ ಕಡೆಗೆ
ಕಂಬಳಿಹುಳದಂತೆ್ ಬದಲಾಗಿ
ಸೆಳೆವ ಬಣ್ಣದ ಚಿಟ್ಟೆಯಾಗಬೇಕು
ರೇಷ್ಮೆಹುಳದಂತೆ ಬಲಿದಾನಗೈದು
ಹೊಳೆವ ರೇಷ್ಮೆದಾರವಾಗಬೇಕು
ಸುಮ್ಮನೆ ಕೊಳೆತು ನಾರಬಾರದು
ನಮಗೆ ನಾವೆ ಭಾರವಾಗಬಾರದು.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments